ಮೈಸೂರು: ಮೈಸೂರಿನ ವಿಜಯನಗರದಲ್ಲಿರುವ ಶ್ರೀ ಯೋಗನರಸಿಂಹ ಸ್ವಾಮಿ ದೇವಸ್ಥಾನದಲ್ಲಿ
2026 ನೂತನ ವರ್ಷ ಸ್ವಾಗತಕ್ಕೆ ತಿರುಪತಿ ಮಾದರಿ 2 ಲಕ್ಷ ಲಡ್ಡು ಪ್ರಸಾದ ವಿತರಿಸಲಾಗುತ್ತದೆ.
ಈ ಬಗ್ಗೆ ದೇವಸ್ಥಾನದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಸಂಸ್ಥಾಪಕರಾದ ಶ್ರೀ ಭಾಷ್ಯಂ ಸ್ವಾಮೀಜಿಯವರು ಮಾಹಿತಿ ನೀಡಿದರು.
ಪ್ರತಿವರ್ಷದಂತೆ ಈ ವರ್ಷವೂ ಜನವರಿ ಒಂದರಂದು ತಿರುಪತಿ ಮಾದರಿ ಲಡ್ಡುಗಳನ್ನ ವಿತರಿಸಲಾಗುತ್ತದೆ.ಬೆಳಿಗ್ಗೆ 4 ಗಂಟೆಯಿಂದ ರಾತ್ರಿ 11 ಗಂಟೆ ವರೆಗೆ ವಿತರಿಸಲಾಗುತ್ತದೆ ಎಂದು ತಿಳಿಸಿದರು.
ಕಳೆದ 10 ದಿನಗಳಿಂದ ಲಡ್ಡು ತಯಾರಿಕೆ ಕಾರ್ಯ ಭರದಂದಿ ಸಾಗಿದೆ.ನುರಿತ 100 ಬಾಣಸಿಗರಿಂದ ತಯಾರಿ ಕಾರ್ಯ ನಡೆಯುತ್ತಿದೆ.ಈ ವರ್ಷ 2 ಕೆಜಿ ತೂಕದ 10 ಸಾವಿರ ಲಡ್ಡುಗಳು ಹಾಗೂ 150 ಗ್ರಾಂ ತೂಕದ 2 ಲಕ್ಷ ಲಡ್ಡುಗಳು ಸಜ್ಜಾಗಿದೆ.ಲಡ್ಡು ತಯಾರಿಕೆಗಾಗಿ 100 ಕ್ವಿಂಟಾಲ್ ಕಡ್ಲೆ ಹಿಟ್ಟು,200 ಕ್ವಿಂಟಾಲ್ ಸಕ್ಕರೆ,10 ಸಾವಿರ ಲೀ ಖಾದ್ಯ ತೈಲ,500 ಕೆಜಿ ಗೋಡಂಬಿ,500 ಕೆಜಿ ಒಣದ್ರಾಕ್ಷಿ,250 ಕೆಜಿ ಬಾದಾಮಿ,1000 ಕೆಜಿ ಡೈಮಂಡ್ ಸಕ್ಕರೆ,2000 ಕೆಜಿ ಬೂರಾ ಸಕ್ಕರೆ,50 ಕೆಜಿ ಪಿಸ್ತಾ,50 ಕೆಜಿ ಏಲಕ್ಕಿ,50 ಕೆಜಿ ಜಾಕಾಯಿ ಮತ್ತು ಜಾಪತ್ರೆ,50 ಕೆಜಿ ಪಚ್ಚ ಕರ್ಪೂರ,200 ಕೆಜಿ ಲವಂಗ ಬಳಸಲಾಗಿದೆ ಎಂದು ವಿವರಿಸಿದರು.
ಜನವರಿ ಒಂದರಂದು ಶ್ರೀ ಯೋಗನರಸಿಂಹಸ್ವಾಮಿಗೆ ವಿಶೇಷ ಅಲಂಕಾರ,ಸ್ವರ್ಣಪುಷ್ಪದಿಂದ ಸ್ವಾಮಿಗೆ ಸಹಸ್ರನಾಮ ಹಾಗೂ ಉತ್ಸವಮೂರ್ತಿಯ ಏಕಾದಶ ಪ್ರಾಕಾರೋತ್ಸವ ನಡೆಯಲಿದೆ.ಭಕ್ತರಿ ಲಡ್ಡು ಜೊತೆಗೆ ಪುಳಿಯೊಯೊಗರೆ ಪ್ರಸಾದ ವಿತರಿಸಲಾಗುತ್ತದೆ.50 ಕ್ವಿಂಟಾಲ್ ಪುಳಿಯೋಗರೆ ಪ್ರಸಾದ ಸಿದ್ದಪಡಿಸಲಾಗುತ್ತದೆ ಎಂದು ಭಾಷ್ಯಂ ಸ್ವಾಮೀಜಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಆಡಳಿತ ಅಧಿಕಾರಿ ಶ್ರೀನಿವಾಸ್, ಡಾ. ರಾಜಕುಮಾರ್ ಅವರ ಅಳಿಯ ಗೋವಿಂದರಾಜು ಹಾಗೂ ಅವರ ಪತ್ನಿ ಲಕ್ಷ್ಮಿ ಉಪಸ್ಥಿತರಿದ್ದರು.

