ಬೆಂಗಳೂರು: ಮೂರು ದಿನಗಳ ಬೆಂಗಳೂರು ಟೆಕ್ ಸಮಿಟ್-2020ಯಲ್ಲಿ ಎರಡನೇ ದಿನವಾದ ಶುಕ್ರವಾರ ರಾಜ್ಯವು ಜಾಗತಿಕ ಆವಿಷ್ಕಾರ ಮೈತ್ರಿಕೂಟದ ಎಂಟು ದೇಶಗಳ ಜತೆ ಮಹತ್ವದ ಎಂಟು ಒಪ್ಪಂದಗಳಿಗೆ ಸಹಿ ಹಾಕಿದೆ.
ನವೋದ್ಯಮಗಳ ಸ್ಥಾಪನೆ, ಕೌಶಲ್ಯಾಭಿವೃದ್ಧಿ, ಸಂಶೋಧನೆ ಮತ್ತು ಅಭಿವೃದ್ಧಿ, ಎಕೋಸಿಸ್ಟಮ್ ಕನೆಕ್ಟ್, ಲೈಫ್ ಸೈನ್ಸ್, ಜೈವಿಕ ತಂತ್ರಜ್ಞಾನ, ಆರೋಗ್ಯ, ರಕ್ಷಣೆ, ಬಾಹ್ಯಾಕಾಶ, ಕ್ರೀಡೆ, ಶಿಕ್ಷಣ, ಪರಸ್ಪರ ಮಾರುಕಟ್ಟೆ ವಿಸ್ತರಣೆ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವಿವಿಧ ದೇಶಗಳ ಜತೆ ಕರ್ನಾಟಕವು ಅಂಕಿತ ಹಾಕಿತು.
ಐಟಿ-ಬಿಟಿ ಸಚಿವರು ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ವರ್ಚುಯಲ್ ವೇದಿಕೆಯ ಮೂಲಕ ಒಪ್ಪಂದಗಳಿಗೆ ಅಧಿಕೃತ ಮುದ್ರೆ ಬಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿಗಳು, ಅಂಕಿತ ಬಿದ್ದಿರುವ ಎಲ್ಲ ಒಪ್ಪಂದಗಳು ಎರಡೂ ಕಡೆಗಳ ಹಿತಾಸಕ್ತಿಗೆ ಪೂರಕವಾಗಿದ್ದು, ಆರ್ಥಿಕ ಹಾಗೂ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಲಿವೆ. ಕರ್ನಾಟಕವು ಜಗತ್ತಿನ ಜತೆ ದೊಡ್ಡ ಪ್ರಮಾಣದಲ್ಲಿ ವ್ಯವಹಾರ ಕುದುರಿಸಿದಂತಾಗಿದೆ ಎಂದರು.
ಈ ಎಲ್ಲ ಒಪ್ಪಂದಗಳಿಗೆ ರಾಜ್ಯದ ಪರವಾಗಿ ಆಯಾ ಇಲಾಖೆಯ ಅಧಿಕಾರಿಗಳು ವರ್ಚುಯಲ್ ವೇದಿಕೆಯಲ್ಲಿ ಹಾಜರಿದ್ದು ದಾಖಲೆಗಳನ್ನು ನೀಡಿದರೆ, ಅದೇ ರೀತಿ ಆವಿಷ್ಕಾರ ಮೈತ್ರಿಕೂಟದ ದೇಶಗಳ ಸ್ಥಳೀಯ ಕಾನ್ಸುಲೇಟ್ಗಳ ಹಿರಿಯ ಅಧಿಕಾರಿಗಳು ಅಂಕಿತ ಹಾಕಿ ದಾಖಲೆಗಳನ್ನು ಹಸ್ತಾಂತರ ಮಾಡಿದರು.

