ಸಭೆ, ಸಮಾರಂಭದಲ್ಲಿ ಜನ ಹೆಚ್ಚು ಸೇರದಂತೆ ಕ್ರಮ -ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು: ಮದುವೆ ಮೊದಲಾದ ಸಭೆ, ಸಮಾರಂಭಗಳಲ್ಲಿ ಹೆಚ್ಚು ಜನರು ಸೇರದಂತೆ ಈಗಾಗಲೇ ಸೂಚಿಸಲಾಗಿದೆ. ಆದರೆ ಗಡಿ ಭಾಗಗಳಲ್ಲಿ ಪ್ರಯಾಣಕ್ಕೆ ನಿಬರ್ಂಧ ಹೇರಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ನಗರದಲ್ಲು ಸಚಿವರು ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಪಂಚತಾರಾ ಹೋಟೆಲ್, ಕಲ್ಯಾಣ ಮಂಟಪ ಮೊದಲಾದ ಸ್ಥಳಗಳಲ್ಲಿ ಕೊರೊನಾ ಹರಡದಂತೆ ಸುರಕ್ಷಿತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ತಡರಾತ್ರಿ ಪಾರ್ಟಿಗಳು, ಹೆಚ್ಚು ಜನರ ಸೇರುವುದನ್ನು ತಡೆಗಟ್ಟಲು ಮಾರ್ಗಸೂಚಿ ನೀಡಲಾಗಿದೆ. ಪಕ್ಕದ ರಾಜ್ಯ ಮಹಾರಾಷ್ಟ್ರ, ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಆದರೆ ಪ್ರಯಾಣಕ್ಕೆ ನಿಬರ್ಂಧ ಹೇರಿಲ್ಲ ಎಂದರು.
ಕೋವಿಡ್ ಬೆಳವಣಿಗೆಗಳನ್ನು ಗಮನಿಸಲಾಗುತ್ತಿದೆ. ಇದೇ ಸಮಯದಲ್ಲಿ 3,500 ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಜೊತೆಗೆ ಪರೀಕ್ಷೆ ಸಂಖ್ಯೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ತೇಜೋವಧೆ ಮಾಡುವಂಥ ಅಪ್ರಮಾಣೀಕೃತ ಸುದ್ದಿಗಳನ್ನು ಪ್ರಸಾರ ಮಾಡದಂತೆ ನ್ಯಾಯಾಲಯ ನಿಬರ್ಂಧ ಹೇರಿರುವ ಕುರಿತಂತೆ ಪ್ರತಿಕ್ರಿಯಿಸಿದ ಸಚಿವರು, ಮಾಧ್ಯಮಗಳು ಪ್ರಜಾಪ್ರಭುತ್ವದ ಸ್ಥಂಭವಾಗಿದೆ. ವಿಡಿಯೋ ಪ್ರಸಾರದ ವಿಚಾರದಲ್ಲಿ ಮಾಧ್ಯಮಗಳು ಪರಿಶೀಲಿಸಬೇಕಿತ್ತು. ಮಾಧ್ಯಮಗಳು ವಿಡಿಯೋ ಪಡೆದಾಗ ಅದನ್ನು ಪರಿಶೀಲಿಸಬೇಕು. ಸತ್ಯ ಪರಿಶೀಲಿಸದೆ ಯಾವುದನ್ನೂ ಪ್ರಸಾರ ಮಾಡಬಾರದು. ವಿಡಿಯೋ ಹಿಂದೆ ರಾಜಕೀಯ ಸೇರಿದಂತೆ ಬೇರೆ ಬೇರೆ ಕಾರಣಗಳಿವೆ ಎಂದರು.