ಜಿಲ್ಲಾಧಿಕಾರಿ ಎಲ್ಲದಕ್ಕು ಲೆಕ್ಕ ಕೊಟ್ಟಿದ್ದಾರಾ? ಸಂಸದ ಪ್ರತಾಪ್ ಸಿಂಹ ಪ್ರಶ್ನೆ

ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಎಲ್ಲದಕ್ಕು ಲೆಕ್ಕ ಕೊಟ್ಟಿದ್ದಾರಾ? ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸಂಸದ ಪ್ರತಾಪ್ ಸಿಂಹ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕೊರೊನಾ ನಿರ್ವಹಣೆಗೆ ಖರ್ಚು ಮಾಡಿದ ಅನುದಾನದ ಹಣದ ಬಗ್ಗೆ ಲೆಕ್ಕ ಕೇಳಿದ್ದೆ, ಎಲ್ಲದಕ್ಕು ಲೆಕ್ಕ ಕೊಟ್ಟಿದ್ದಾರಾ? ಎಂದು ಎಂದಿದ್ದಾರೆ.
ಹಿಂದಿನ ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ಇದ್ದಾಗ ಅವರ ಬಳಿ ಲೆಕ್ಕವನ್ನೇ ಕೇಳಿಲ್ಲ. ಅವರ ಬಳಿ ಪಾರದರ್ಶಕತೆ ಇತ್ತು. ಆದರೆ ಈಗಿನ ಜಿಲ್ಲಾಧಿಕಾರಿಯವರಲ್ಲಿ ಪಾರದರ್ಶಕ ಅಧಿಕಾರ ಕಾಣುತ್ತಿಲ್ಲ ಎಂದರು.
ಜಿಲ್ಲಾಧಿಕಾರಿಗೆ ನಾನು ಬಹಳ ಲೆಕ್ಕ ಕೇಳಿದ್ದೆ. ಎಲ್ಲದಕ್ಕು ಲೆಕ್ಕ ಕೊಟ್ಟಿದ್ದಾರಾ.? ಸ್ಟೆಪ್ ಡೌನ್ ಆಸ್ಪತ್ರೆಗಳ ಬಗ್ಗೆಯೂ ಕೇಳಿದ್ದೆ ಅದಕ್ಕೆ ಉತ್ತರ ಕೊಟ್ಟಿದ್ದಾರಾ..? ಸಿಮ್ಮಿಂಗ್ ಪೂಲ್ ಲೆಕ್ಕ ಕೇಳಿದ್ದೆ, ಅದಕ್ಕೆ ಲೆಕ್ಕ ಕೊಟ್ಟಿದ್ದಾರಾ? ಎಂದು ಪ್ರತಾಪ್ ಸಿಂಹ ಹೇಳಿದರು.
ಯಾವುದೋ 2, 4, 5 ಅಂತ ರೌಂಡ್ ಫಿಗರ್ ಲೆಕ್ಕ ಕೊಡೋದ್ ಅಲ್ಲ. ಲೆಕ್ಕಕೊಡೊದಾದರೆ ವಸ್ತು ಹಾಗೂ ಖರ್ಚಿನ ಲೆಕ್ಕ ಕೊಡಲಿ. ಸುಮ್ಮನೆ ಹೋಟೆಲ್ ಗಳಿಗೆ 4 ಕೋಟಿ ಅಂತ ಬರೆಯೋದಲ್ಲ. ಯಾವುದಕ್ಕೆ ಎಷ್ಟು ಅಂತ ಬಿಲ್ ಬೇಕಲ್ವಾ ಎಂದರು ಪ್ರತಾಪ್ ಸಿಂಹ.
ನಾನು ಇನ್ನು ಮುಂದೆ ಯಾರ ಬಗ್ಗೆ ಮಾತಾಡಲ್ಲ. ನನಗೆ ನೀಡಿರುವ ಜವಾಬ್ದಾರಿ ನಾನು ನಿಭಾಹಿಸುತ್ತೇನೆ. ವ್ಯಾಕ್ಸಿನ್ ಜವಾಬ್ದಾರಿಯನ್ನು ನನ್ನ ಮೇಲೆ ಎಳೆದುಕೊಂಡೆ ಮಾಡುತ್ತೇನೆಂದರು.
ಮೈಸೂರು ಜಿಲ್ಲೆಯಲ್ಲಿನ ಕೊರೊನಾ ಸಾವಿನ ಲೆಕ್ಕದ ಬಗ್ಗೆ ನನಗೂ ಅನುಮಾನ ಇದೆ ಎಂದು ಅವರು ಹೇಳಿದರು.
ನಾವು ಹಲವು ಕಡೆ ಪ್ರವಾಸ ಮಾಡುತ್ತಿರುತ್ತೇವೆ. ಆಗ ಜನರು ಹಲವು ದೂರು ಹೇಳುತ್ತಾರೆ. ನಾವೇ ಬೆಡ್ ಕೊಡಿಸಿದ ರೋಗಿಗಳಿಗೆ ಐಸಿಯು ಸಿಗದೆ ಸತ್ತಿದ್ದಾರೆ ಅಂತಾರೆ. ಆದರೆ ಜಿಲ್ಲಾಡಳಿತ ಲೆಕ್ಕಕ್ಕು ಅಂತ್ಯ ಸಂಸ್ಕಾರ ನಡೆಯುತ್ತಿರುವುದಕ್ಕೂ ವ್ಯತ್ಯಾಸ ಇದೆ. ಈ ಬಗ್ಗೆ ನನಗೂ ಅನುಮಾನ ಇದೆ ಎಂದು ಅವರು ಹೇಳಿದರು.
ಇದೇ ಜೂನ್ ಅಂತ್ಯದಲ್ಲಿ ಕೆ.ಆರ್.ಆಸ್ಪತ್ರೆ ಆವರಣದಲ್ಲಿ ನಿರ್ಮಿಸಲಾಗುತ್ತಿರುವ 1000 ಎಲ್ ಪಿಎಂ ಸಾಮಥ್ರ್ಯದ ಆಕ್ಸಿಜನ್ ಪ್ಲಾಂಟ್ ಕಾಮಗಾರಿ ಪೂರ್ಣಗೊಳಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಪ್ರತಾಪ್ ಸಿಂಹ ತಿಳಿಸಿದರು.
ಮುಂದಿನ ದಿನಗಳಲ್ಲಿ ಲಸಿಕಾಭಿಯಾನವು ಭರದಿಂದ ಸಾಗಬೇಕಿದೆ. ಅದಕ್ಕೂ ಕೂಡ ಸಿದ್ಧತೆ ನಡೆಯುತ್ತಿದೆ ಎಂದರು.
ಕೆ.ಆರ್.ಆಸ್ಪತ್ರೆ ಸಮಸ್ಯೆ ಬಗೆಹರಿಸಲು ಮುಂದಿನ ದಿನಗಳಲ್ಲಿ ವೈಯಕ್ತಿಕವಾಗಿ ನಾನೇ ಜವಾಬ್ದಾರಿ ತೆಗೆದುಕೊಂಡು ಮಾಡುತ್ತೇನೆಂದರು.