ಬೆಂಗಳೂರು: ನವಸಮಾಜ , ಸಮಸಮಾಜ ನಿರ್ಮಾಣವಾಗಬೇಕೆಂದು ಕನಕದಾಸರು ಕನಸು ಕಂಡಿದ್ದರು, ಅವರು ಪರಿವರ್ತನೆಯ ಹರಿಕಾರರು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕನಕ ಜಯಂತಿ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿರುವ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ದಾಸರ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.
ದಾಸ ಶ್ರೇಷ್ಠ ಕನಕದಾಸರ ಚಿಂತನೆಗಳು ಮತ್ತು ತತ್ವ ಆದರ್ಶಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಶಾಂತಿ, ನೆಮ್ಮದಿ ಹಾಗೂ ನವ ಸಮಾಜ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ದಾಸ ಸಾಹಿತ್ಯದ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಶ್ರಮಿಸಿದ ಮಹಾನೀಯರು ಎಂದು ಬಣ್ಣಿಸಿದರು.
ಕನಕದಾಸರ ಹುಟ್ಟೂರು ಬಾಡದಲ್ಲಿ ರಾಜ್ಯ ಸರ್ಕಾರ ಅವರ ಅರಮನೆ ಮತ್ತು ಮ್ಯೂಸಿಯಂ ನಿರ್ಮಾಣ ಮಾಡಿದೆ. ಈ ಮೂಲಕ ಅವರ ಕನಸುಗಳನ್ನು ಮುಂದಿನ ಜನಾಂಗಕ್ಕೆ ನನಸು ಮಾಡಲು ನಾವು ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಕನಕದಾಸರಂತೆ ಸ್ವಾತಂತ್ರ್ಯ ಸೇನಾನಿ ವೀರ ಸಂಗೊಳ್ಳಿ ರಾಯಣ್ಣನವರ ಹುಟ್ಟೂರಿನಲ್ಲಿ ಸೈನಿಕ ಶಾಲೆಯನ್ನು ನಿರ್ಮಿಸುತ್ತಿದ್ದೇವೆ. ಇದಕ್ಕಾಗಿ ಸರ್ಕಾರ ಸುಮಾರು 180 ಕೋಟಿ ರೂ. ಹಣವನ್ನು ವ್ಯಯಿಸಲಿದೆ. ಈಗಾಗಲೇ 50 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಜೊತೆ ನಾನು ಮಾತುಕತೆ ನಡೆಸಿದ್ದೇನೆ. ಸೈನಿಕ ಶಾಲೆ ಉದ್ಘಾಟನೆಯಾದ ಬಳಿಕ ಇದನ್ನು ರಕ್ಷಣಾ ಇಲಾಖೆ ನಿರ್ವಹಣೆ ಮಾಡಬೇಕೆಂಬುದು ನಮ್ಮ ಆಶಯವಾಗಿದೆ ಎಂದು ಸಿ ಎಂ ಹೇಳಿದರು.

