ಬೆಂಗಳೂರು:ಪ್ರಸಕ್ತ ವರ್ಷದ ವಿಧಾನ ಮಂಡಲದ ಉಭಯ ಸದನಗಳ ಜಂಟಿ ಅಧಿವೇಶನವನ್ನು ಫೆಬ್ರವರಿ 14 ರಿಂದ 25 ರ ವರೆಗೆ ನಡೆಸಲುಸರ್ಕಾರ ತೀರ್ಮಾನಿಸಿದೆ.
ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ,ಜಂಟಿ ಅಧಿವೇಶನವನ್ನು ಫೆ. 14 ರಿಂದ 25 ರ ವರೆಗೆ ನಡೆಸಲು ನಿರ್ಧಾರಿಸಲಾಗಿದ್ದು, ಅಧಿವೇಶನದ ಮೊದಲ ದಿನ ರಾಜ್ಯಪಾಲರು ಭಾಷಣ ಮಾಡುವರು.
ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು,ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಅಧಿವೇಶನ ನಡೆಸಲಾಗುವುದು ಎಂದು ಹೇಳಿದರು.
ಸಚಿವ ಸಂಪುಟ ಸಭೆಯಲ್ಲಿ ಕೋವಿಡ್ ಸ್ಥಿತಿಗತಿ, ಮುಂದಿನ ದಿನಗಳಲ್ಲಿ ಕೋವಿಡ್ ನಿರ್ವಹಣೆ ಬಗ್ಗೆ ಚರ್ಚೆ ಮಾಡಲಾಗಿದೆ.ಹಾಲಿ ಇರುವ ನಿಯಮಗಳನ್ನು ಸಡಿಲಿಕೆ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.
ನಿಯಮಗಳನ್ನು ತೆರವುಗೊಳಿಸಲು ಬೇರೆ ಬೇರೆ ವಲಯದವರ ಮನವಿ ಇದೆ,ಶಾಲಾ ಕಾಲೇಜುಗಳ ಬಗ್ಗೆ ಚರ್ಚೆ ಮಾಡಿದ್ದೇವೆ.ಎಲ್ಲ ಸಚಿವರೂ ತಮ್ಮ ಅಭಿಪ್ರಾಯ ಹೇಳಿದ್ದಾರೆ ಎಂದರು.
ನಿಯಮಗಳ ಸಡಿಲಿಕೆ ಬಗ್ಗೆ ತಜ್ಞರ ವರದಿ ಬಂದ ಬಳಿಕ ಚರ್ಚೆ ಮಾಡಿ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದರು.
ಆರು ತಿಂಗಳಲ್ಲಿ ಇಲಾಖಾವಾರು ಆಗಿರುವ ಕಾರ್ಯಕ್ರಮಗಳ ಬಗ್ಗೆ ಮುಂದಿನ ಒಂದು ವಾರ ಸಚಿವರು ಸುದ್ದಿಗೋಷ್ಟಿಗಳನ್ನು ನಡೆಸಿ ಮಾಧ್ಯಮಗಳ ಮೂಲಕ ವಿವರ ಕೊಡಲು ಸೂಚನೆ ನೀಡಲಾಗಿದೆ ಎಂದರು.
ಜೊತೆಗೆ ಜಿಲ್ಲಾ, ತಾಲ್ಲೂಕು ಪಂಚಾಯತ್ ,ಬಿಬಿಎಂಪಿ ಚುನಾವಣೆ ಬಗ್ಗೆ ಸುದೀರ್ಘ ಚರ್ಚೆ ಆಗಿದೆ.ಚುನಾವಣೆ ಯಾವಾಗ ಬಂದರೂ ಯಶಸ್ವಿಯಾಗಿ ನಿಭಾಯಿಸಲು ಸೂಚನೆ ನೀಡಲಾಗಿದೆ ಎಂದು ತಿಳಿರಸಿದರು.
ಬಿಬಿಎಂಪಿ ಚುನಾವಣೆಗೆ ಬಿಜೆಪಿ ಸಿದ್ಧತೆ ಸಭೆ ಬಗ್ಗೆ ಸಿದ್ದರಾಮಯ್ಯ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ,ಕಾಂಗ್ರೆಸ್ ಇರೋದೇ ಆರೋಪ ಮಾಡಲು.ಅವರು ಅಧಿಕಾರದಲ್ಲಿ ಇದ್ದಾಗ ಏನೆಲ್ಲ ಮಾಡಿದ್ದಾರೆ ಎಂಬುದನ್ನು ನೆನಪಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ನಂದಿ ಬೆಟ್ಟದಲ್ಲಿ ನಡೆಸಲು ಉದ್ದೇಶಿದ್ದ ಬೈಠಕ್ ಚಿಂತನಾ ಸಭೆ ಬಗ್ಗೆ ಆದಷ್ಟು ಬೇಗ ಚಿಂತನ ಮಂತನ ಸಭೆ ನಡೆಸುತ್ತೇವೆ ಎಂದು ಬೊಮ್ಮಾಯಿ ಹೇಳಿದರು.
ಸಂಪುಟ ಪುನಾರಚನೆ ವಿಚಾರವಾಗಿ,ವರಿಷ್ಠರ ಜತೆ ಮಾತನಾಡುತ್ತೇನೆ.ಅವರು ಕರೆದರೆ ದೆಹಲಿಗೆ ಹೋಗುವೆ.ಎಲ್ಲ ಸಂಸದರ ಜತೆ ಸಭೆ ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.

